ಅಂಕಣ ಸಾಹಿತ್ಯ ಪರಿಚಯ

                                                  ಅಂಕಣ ಸಾಹಿತ್ಯ
ಇದೊಂದು ವಿಶಿಷ್ಟ ಬಗೆಯ ಪತ್ರಿಕಾಸಾಹಿತ್ಯ. ಪತ್ರಿಕೆಗಳಲ್ಲಿ ನಿಯತವಾಗಿ ಬರೆಯುವ ನಿರ್ದಿಷ್ಟ ಲೇಖನಕ್ಕೆ ಅಂಕಣ ಬರೆಹವೆಂದು ಹೆಸರು. ಕನ್ನಡದಲ್ಲಿ ಅಂಕಣ ಹಾಗೂ ಅಂಕಣ ಸಾಹಿತ್ಯದ ಪರಿಕಲ್ಪನೆ ಇಂಗ್ಲಿಷ್ ಪತ್ರಿಕೋದ್ಯಮದಿಂದ ಬಂದಿದ್ದು. ಇಂಗ್ಲಿಷಿನ ಕಾಲಂ ಎಂಬ ಪದ ಹಾಗೂ ಪರಿಕಲ್ಪನೆಗೆ ಸಂವಾದಿಯಾಗಿ ಕನ್ನಡದಲ್ಲಿ ಅಂಕಣ ಎಂಬ ಪದ ಬಳಕೆಯಾಗುತ್ತಿದೆ. ಯಾವುದೇ ವಸ್ತು ವಿಷಯವನ್ನು ಕುರಿತು ಒಂದು ನಿರ್ದಿಷ್ಟ ಪತ್ರಿಕೆ ಅಥವಾ ನಿಯತಕಾಲಿಕೆಗೆ ತಮ್ಮ ವೈಯಕ್ತಿಕ ಚಿಂತನೆಯನ್ನು ಸೇರಿಸಿ ನಿಯತವಾಗಿ ಬರೆಯುವವನೇ ಅಂಕಣಕಾರ. ಅಂಕಣ ಬರೆಹದಲ್ಲಿ ಅಂಕಣಕಾರ ಸಮಕಾಲೀನ ವಸ್ತು ವಿಷಯಗಳಿಗೆ ಸ್ವಂತಿಕೆಯ ಲೇಪ ಹಾಗೂ ಛಾಪನ್ನು ನೀಡಬೇಕಾಗುತ್ತದೆ. -ಇದು ಅಂಕಣ ಬರೆಹದ ಒಂದು ಮುಖ್ಯಲಕ್ಷಣವಾಗಿದೆ.


ಕನ್ನಡದಲ್ಲಿ ಅಂಕಣ ಸಾಹಿತ್ಯ 20ನೆಯ ಶತಮಾನದ ಆರಂಭದಲ್ಲಿ ಕಾಣಿಸಿಕೊಳ್ಳತೊಡಗಿತು. ಕನ್ನಡ ಪತ್ರಿಕೋದ್ಯಮದ ಆರಂಭವನ್ನು ಮಂಗಳೂರ ಸಮಾಚಾರ (1843) ಪತ್ರಿಕೆಯಿಂದ ಗುರುತಿಸಲಾಗುತ್ತಿದೆ. ಅಂಕಣ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬಗೆಯ ಗದ್ಯವಿರುತ್ತದೆ. ಇತ್ತ ವರದಿಯೂ ಅಲ್ಲದ ಅತ್ತ ಪೂರ್ಣವಾಗಿ ಸಾಹಿತ್ಯವೂ ಅಲ್ಲದ ಆದರೆ ಸಮಕಾಲೀನ ಆಗುಹೋಗುಗಳನ್ನು ಹಿಡಿದಿಡುವ ಸೃಜನಶೀಲತೆಯ ಸೆಲೆಯುಳ್ಳ ಬರೆಹವೇ ಕನ್ನಡ ಅಂಕಣ ಸಾಹಿತ್ಯವೆನಿಸಿಕೊಂಡಿತು. ಕನ್ನಡದ ಸಾಹಿತಿ ಪತ್ರಿಕೋದ್ಯಮಿಗಳಾದ ಡಿವಿಜಿ ಮತ್ತು ಮಾಸ್ತಿ ವೆಂಕಟೇಶಅಯ್ಯಂಗಾರ್ ಅವರ ಸಂಪಾದಕೀಯ ಬರೆಹಗಳು ಕನ್ನಡ ಅಂಕಣ ಸಾಹಿತ್ಯದ ಉಗಮಕ್ಕೆ ತೋರುದೀವಿಗೆಗಳಾದವು. ಕನ್ನಡ ಪತ್ರಿಕೋದ್ಯಮ ಬೆಳೆಯುತ್ತ ಬಂದಂತೆ ಅದರ ವ್ಯಾಪ್ತಿಯೂ ವಿಸ್ತಾರವಾಗತೊಡಗಿತು. ಸಂಪಾದಕೀಯ ಬರೆಹಗಳ ಜೊತೆಗೆ ಅಂಕಣಗಳು ಪ್ರತ್ಯೇಕವಾಗಿ ಕಾಣಿಸಿಕೊಳ್ಳಲು ಆರಂಭವಾದವು. ಸ್ವದೇಶಾಭಿಮಾನಿ, ಅಂತರಂಗ, ದೇಶಬಂಧು, ಛಾಯಾ, ಪ್ರಜಾಮತ, ಪ್ರಜಾವಾಣಿ, ಕನ್ನಡ ಪ್ರಭ, ಕರ್ಮವೀರ, ವಿಶ್ವಕರ್ನಾಟಕ, ಪ್ರಪಂಚ ಮುಂತಾದ ಪತ್ರಿಕೆಗಳು ಅಂಕಣ ಬರೆಹಗಳಿಗೆ ವೇದಿಕೆಯನ್ನು ನೀಡಿದವಲ್ಲದೆ ಅಂಕಣ ಬರೆಹಕ್ಕೆ ಒಂದು ಆಯಾಮವನ್ನೂ ಕೊಟ್ಟವು. ಸಿದ್ಧವನಹಳ್ಳಿ ಕೃಷ್ಣಶರ್ಮ, ನಿರಂಜನ, ಎಚ್ಚೆಸ್ಕೆ, ಹಾ.ಮಾ.ನಾಯಕ, ಕು.ಶಿ,ಹರಿದಾಸಭಟ್ಟ, ಪಾ.ವೆಂ.ಆಚಾರ್ಯ, ತಿ.ತಾ.ಶರ್ಮ, ಎನ್ಕೆ, ಎಂ.ವಿ.ಕಾಮತ್, ಕಲ್ಲೆ ಶಿವೋತ್ತಮರಾವ್, ಕೀರ್ತಿನಾಥ ಕುರ್ತಕೋಟಿ, ಟಿ.ಎಸ್.ರಾಮ ಚಂದ್ರರಾವ್, ಬಿ.ವಿ.ವೈಕುಂಠರಾಜು, ಪಿ.ಲಂಕೇಶ್, ವೈಎನ್ಕೆ, ಜಿ.ವೆಂಕಟಸುಬ್ಬಯ್ಯ, ಸಿ.ವಿ.ರಾಜಗೋಪಾಲ ಬಿ.ಎ.ವಿವೇಕ ರೈ, ಎಸ್.ಎನ್.ಹೆಗಡೆ, ಸೋಮಶೇಖರ ಇಮ್ರಾಪುರ, ಲಿಂಗದೇವರು ಹಳೆಮನೆ ಮೊದಲಾದವರ ಅಂಕಣಗಳು ವಿಶಿಷ್ಟವಾದವು. ಪ್ರಸ್ತುತ ಕನ್ನಡ ಪತ್ರಿಕೋದ್ಯಮದಲ್ಲಿ ಈಗ ಅಂಕಣ ಬರೆಹ ಇಲ್ಲದ ಒಂದು ಪತ್ರಿಕೆಯೂ ಇಲ್ಲ ಎನ್ನಬಹುದು.
ಅಂಕಣ ಬರೆಹದ ವೈಶಿಷ್ಟ್ಯವೆಂದರೆ ಸಾಮಾನ್ಯ ಓದುಗರಿಂದ ಹಿಡಿದು ವಿದ್ವಾಂಸರ ತನಕ ಎಲ್ಲರನ್ನೂ ಆಕರ್ಷಿಸುವ ಗುಣವನ್ನು ಪಡೆದುಕೊಂಡಿರುವುದೇ ಆಗಿದೆ. ಓದುಗರಲ್ಲಿ ಅಭಿರುಚಿ ಮೂಡಿಸುವ ಕಾರ್ಯವನ್ನು ಅಂಕಣ ಬರೆಹ ಮಾಡುತ್ತದೆ. ಅಂಕಣ ಬರೆಹಗಳು ಆತ್ಮಕೇಂದ್ರಿತವೆ, ಸಮಾಜ ಸಾಹಿತ್ಯ ಸಂಸ್ಕøತಿ ಕೇಂದ್ರಿತವೆ ಎಂಬ ಪ್ರಶ್ನೆಯೂ ಇದೆ. ಸಾಮಾನ್ಯವಾಗಿ ಅಂಕಣ ಬರೆಹದಲ್ಲಿ ಲೇಖಕ ನಾನು ಎಂಬ ಪ್ರತ್ಯಯವನ್ನು ಬಳಸಿದರೂ ಅದು ಆತ್ಮಕೇಂದ್ರಿತ ಅಥವಾ ಅಹಮಿಕೆಯನ್ನು ಸೂಚಿಸುವ ಪದವಾಗಿ ಉಳಿಯುವುದಿಲ್ಲ; ಬದಲಿಗೆ ಬರೆಹಕ್ಕೆ ಸಂವಾದ ಸ್ವರೂಪವನ್ನು ನೀಡುತ್ತದೆ.
ಅಂಕಣ ಬರೆಹಕ್ಕೆ ಸಮಕಾಲೀನ ಸಮಾಜದ ಯಾವ ಮುಖವಾದರೂ ವಸ್ತುವಾಗಬಹುದೆಂದು ಪ್ರಸಿದ್ಧ ಅಂಕಣಕಾರರಾದ ಹಾ.ಮಾ. ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚಿನ ಅಂಕಣ ಬರೆಹಗಳು ಸಮಕಾಲೀನ ರಾಜಕೀಯ ವಿದ್ಯಾಮಾನಗಳನ್ನು ಕುರಿತಿರುತ್ತವೆ. ಸಾಹಿತ್ಯಕ ಪ್ರಸ್ತಾಪವುಳ್ಳ ಅಂಕಣಗಳು ಕನ್ನಡದಲ್ಲಿ ವಿರಳ. ವಿಜ್ಞಾನ, ಸಂಗೀತ, ಕಲೆ, ಶಿಕ್ಷಣ, ವೈದ್ಯಕೀಯ, ಕ್ರೀಡೆ ಮುಂತಾದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಂಕಣಗಳು ದುರ್ಲಭವೇನಲ್ಲ. ಈಗೀಗ ಲಘು ಹರಟೆಗಳೂ ಅಂಕಣ ಬರೆಹದಲ್ಲಿ ಸ್ಥಾನಪಡೆದಿವೆ. ಸಾಹಿತ್ಯ ವಿಚಾರ ಪ್ರಧಾನವಾದ ಅಂಕಣಗಳಲ್ಲಿ ಸಾಮಾನ್ಯವಾಗಿ ವ್ಯಕ್ತಿ, ಕೃತಿ, ಸಂಸ್ಕøತಿ, ಶಿಕ್ಷಣ ಹಾಗೂ ಕಲೆಗಳನ್ನು ಕುರಿತ ಚಿಂತನೆ ಇರುತ್ತದೆ. ಈ ಬಗೆಯ ಕನ್ನಡ ಅಂಕಣಕಾರರಲ್ಲಿ ನಿರಂಜನರೇ ಆದ್ಯರು. ಉಷಾ ಪತ್ರಿಕೆಯಲ್ಲಿ ಬರೆದ ಸರೋಜ ಸಂಚಯ ಎಂಬ ಅಂಕಣ ಜನಪ್ರಗತಿ ಪತ್ರಿಕೆಯಲ್ಲಿ ಬರೆದ ಸಾಧನ ಸಂಚಯ ಎಂಬ ಅಂಕಣ, ಚಿತ್ರಗುಪ್ತ ಪತ್ರಿಕೆಯ ಐದು ನಿಮಿಷ ಎಂಬ ಅಂಕಣ, ಪ್ರಜಾವಾಣಿ ಪತ್ರಿಕೆಯ ಬೇವು ಬೆಲ್ಲ ಎಂಬ ಅಂಕಣ ಕರ್ಮವೀರ ಪತ್ರಿಕೆಯ ರಾಜ್ಯದ ರಾಜಧಾನಿಯಿಂದ ಹಾಗೂ ಅನಂತರದಲ್ಲಿ ನನ್ನ ದಿನಚರಿಯಿಂದ ಎಂಬ ಅಂಕಣಗಳು ಪ್ರಸಿದ್ಧವಾಗಿದ್ದವು. ಜಿ.ಪಿ.ರಾಜರತ್ನಂ ಅವರ ವಿಚಾರ ಸರಣಿ ವಿ.ಎಂ.ಇನಾಂದಾರರ ಸಾಹಿತ್ಯ ವಿಹಾರ, ಕು.ಶಿ.ಹರಿದಾಸಭಟ್ಟರ ಲೋಕಾಭಿರಾಮ, ಇವು ಪ್ರಮುಖ ಸಾಹಿತ್ಯಕ ಅಂಕಣಗಳಾಗಿದ್ದವು. ಇದೇ ವರ್ಗಕ್ಕೆ ಸೇರುವ, ಆದರೆ ಹೆಚ್ಚುಕಾಲ ಬರೆಯದ ಅಂಕಣಕಾರರಲ್ಲಿ ಸಿದ್ಧವನಹಳ್ಳಿ ಕೃಷ್ಣಶರ್ಮ, ಶ್ರೀರಂಗ, ಬಸವರಾಜ ಕಟ್ಟೀಮನಿ, ತರಾಸು, ಹಿರೇಮಲ್ಲೂರು ಈಶ್ವರನ್, ಬಿ.ಭಾಸ್ಕರರಾವ್, ಪಾಟೀಲ ಪುಟ್ಟಪ್ಪ, ಎಲ್.ಎಸ್.ಶೇಷಗಿರಿರಾವ್, ನಾ.ಡಿಸೋಜ ಮುಂತಾದವರನ್ನು ಹೆಸರಿಸಬಹುದು.
ಕನ್ನಡದಲ್ಲಿ ಹೆಚ್ಚು ನಿಯತಕಾಲಿಕೆಗಳಿಗೆ ಹೆಚ್ಚುಕಾಲ ಸಾಹಿತ್ಯಕ ಅಂಕಣ ಬರೆದವರಲ್ಲಿ ಹಾ.ಮಾ.ನಾಯಕ ಮತ್ತು ಎಚ್ಚೆಸ್ಕೆ ಅವರನ್ನು ಹೆಸರಿಸಬಹುದು. ಎಚ್ಚೆಸ್ಕೆ ಅವರ ಅಂಕಣ ಸಾಹಿತ್ಯಕ್ಕಷ್ಟೇ ಸೀಮಿತವಲ್ಲ, ಆರ್ಥಿಕ ವಿಚಾರ, ವ್ಯಕ್ತಿವಿಷಯ, ರಾಜಕೀಯ ಮುಂತಾದವೂ ಅಲ್ಲಿ ಪ್ರಸ್ತಾಪಗೊಳ್ಳುತ್ತವೆ. ಎಚ್ಚೆಸ್ಕೆ ಅವರು ದೇಶಬಂಧು, ವಿಶ್ವಕರ್ನಾಟಕ, ಛಾಯಾ, ಕನ್ನಡನುಡಿ, ಪ್ರಜಾವಾಣಿ, ಸುಧಾ ಪತ್ರಿಕೆಗಳಲ್ಲಿ ಐದಾರು ದಶಕಗಳ ಕಾಲ ಅಂಕಣ ವ್ಯವಸಾಯ ಮಾಡಿದ್ದಾರೆ. ವಾರದಿಂದ ವಾರಕ್ಕೆ, ವಾರದ ವ್ಯಕ್ತಿ, ವ್ಯಕ್ತಿ, ವಿಷಯ, ಆರ್ಥಿಕ ನೋಟ, ದುರ್ಬೀನು ತರಂಗ, ಮುಂತಾದವು ಇವರ ಅಂಕಣ ಶೀರ್ಷಿಕೆಗಳು. ಇತ್ತೀಚೆಗೆ ಇಂಗ್ಲಿಷ್‍ನಲ್ಲಿಯೂ ಸ್ಟಾರ್ ಆಫ್ ಮೈಸೂರು ಪತ್ರಿಕೆಯಲ್ಲಿ ಅಂಕಣಗಳನ್ನು ಬರೆಯುತ್ತಿದ್ದಾರೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶ್ರೀಮತಿ ನೇಮಿಚಂದ್ರ ರ ಪರಿಚಯ

ಭಾಷಾ ಕೌಶಲಗಳು

ಸು.ರಂ. ಎಕ್ಕುಂಡಿ ಕವಿ ಪರಿಚಯ